ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಬುಧವಾರ, ಜುಲೈ 24, 2019

ಕಾಗದ-ಪತ್ರ



ಪ್ರೀತಿಯ ಸುಬ್ರಾಯ,
ನಿನ್ನ ಅಮ್ಮ ಮಾಡುವ ಆಶೀರ್ವಾದಗಳು. ನಾನು ಕ್ಷೇಮ, ನೀನು ಕ್ಷೇಮ ಎಂದು ಬಾವಿಸುತ್ತೇನೆ. ನೀನು ಬೆಂಗಳೂರಿಗೆ ಹೋಗಿ ತಿಂಗಳಾದರೂ ಕಾಗದ ಹಾಕಲಿಲ್ಲ. ಅದಕ್ಕಾಗಿ ನಾನೇ ನಿನ್ನ ಯೋಗ ಕ್ಷೇಮ ವಿಚಾರಿಸಲು ಕಾಗದ ಹಾಕುತ್ತಿದ್ದೇನೆ. ಪತ್ರ ತಲುಪಿದ ಕೂಡಲೇ ಕಾಗದ ಬರೆ. ಹಾಗೆ ನಾಡಿದ್ದು ದೇವಸ್ಥಾನದ ಪೂಜೆ ಇದೆ. ಸ್ವಲ್ಪ ಹಣ ಕಳಿಸು.  ಮೊನ್ನೆ ಸಿಂಗಾರಿ ದನಕ್ಕೆ ಬಂಗಾರಿ ಕರು ಹುಟ್ಟಿದೆ. ಹಾಲು-ಡೈರಿಗೆ ದಿನ 2 ಲೀಟರ್ ಹಾಲು ಕೊಡುತ್ತಿದ್ದೇನೆ. ನಿನ್ನೆಯಿಂದ ಡಿಗ್ರಿ ಕಡಿಮೆ ಬಂದ ಕಾರಣ ಹಾಲು ಡೈರಿ ಬುಡ್ಡಿ ಹಾಲು ವಾಪಾಸು ಕಳ್ಸಿದ್ದಾಳೆ.

“ಅವ್ಳ್ ಹೊಂಡ ಕಡುಕೆ..” “ಎಲ್ಲ ಬರ್ದಿಯಾ ಗಡಾ..” ಅಂದಳು ಆಚಿಮನಿ ಅಬ್ಬಕ್ಕ.  “ಅವ್ಳ್ ಹೊಂಡ ಕಡುಕೆ.. ಅಂದೆಳಿ ಬರಿಲಿಲ್ಲ. ಅದನ್ನು ಬರಿಕಾ..?  ನೆಗಿಯಾಡ್ತಾ ಕೇಂಡೆ. “ಈ ಗಂಡಿದ್ ಒಂದ್ ಹರ್ಮಯ್ಕವೋ, ಆ ಪಾಟಿ ಹಾಲ್ ವಾಪಾಸ್ ಕಳ್ಸಿದಳಲ್ಲ ಅವಳು, ಅದನ್ನ ಎಂಥಾ ಮಾಡುದ್. ನಮ್ಮನೆಗೆ ಕುಡುಕ್ ಮಕ್ಕಳ್ ಇದ್ವಾ?. ಅಲ್ಲಾ ಗಡಾ.. ಆ ಓಣಿ ಮನಿ ಸರೋಜನ ಕಂಡೆಗೆ ಡಿಗ್ರಿ ಬರ್ಲಿ ಅಂದೆಳಿ ನಾನ್ ಸಕ್ಕರಿ ಹಾಕಿನನ, ಆ ರಂಡಿ, ಹಾಲು ಪೂರಾ ವಾಪಾಸ್ ಕಳಿಸ್ಲಕಾ?” ಮತ್ತದೇ ರೇಡಿಯೊ repeat telecast ಶುರು ಆಯಿತು. “ಅವ್ಳನ್ನ ಸುಡಿನಿ ಮರ್ರೆ, ಮತ್ತೆ ಎಂತ ಬರಿಕ್ ಅಂದೇಳಿ ಹೇಳಿ ವಿಷ್ಯ ಬಿಟ್ಟ್, ಬೇರೆ ಎಲ್ಲ ಹೇಳ್ತಿದ್ರ್ಯಲ, ನಂಗೆ ಓದ್ಕಂಬುಕ್ ಇತ್ತ್. ಅಂದೆಳಿ build up ಕೊಡುಕ್ ಶುರು ಮಾಡಿದೆ. “ಇನ್ನ್ ಎಂತ ಬರುದ್, ಎಂತದೋ ನೆಂಪ್ ಮಾಡ್ಕಂಡಿ ಕಾಣ್, ಹಾ... ಈ ಕಾಗದದೊಟ್ಟಿಗೆ ರಾವುತ್ರ ಉಬ್ತಿ ಕಳಿಸಿದಿ, ದಿನ ಮಿಂದುಕಂಡ್, ಹಚ್ಕೊ, ಅಂದೆಳಿ ಬರಿ. ಸಾಕ್. “ ಅಂದೆಳಿ ಸೀರೆ ಸೆರಗೆಗೆ ಕಟ್ಟಿ ಇಟ್ಕಂಡ್ ಉಬ್ತಿನ ತೆಗದು ಕೊಟ್ಟಳ್ ಅಬ್ಬಕ್ಕ. ಅಂತೂ ಹಾಂಗೂ, ಹೀಂಗೂ ಮಾಡಿ, ಆ ಪ್ರಸಾದನ ಕಾಗದ ಒಟ್ಟಿಗೆ ಹಾಕಿ, ಎರಡ್ ಅನ್ನದ ಅಗಳನ್ನ ತಂದು ಕಾಗದ ಅಂಟಿಸಿ, “ನಾಳೆ ಶಾಲಿಗೆ ಹ್ವಾಪತಿಗೆ, post ಡಬ್ಬಿಗೆ ಹಾಕ್ತೆ” ಅಂದೆ. “ಆ ಕಿಚ್ಚಿಡದ್ದ್ ಹಾಲನ್ನ ಬಿಸಿ ಮಾಡ್ತಿ, ಇಲ್ದಿರೆ ಅದೂ ಹಾಳಾತ್ತ್, ನಾ ಬತ್ತೆ.” ಅಂದೆಳಿ ಕಾಲುಕಿತ್ತರು.

ಬಹುಶ 80-90ನೇ ಇಸವಿಯಲ್ಲಿ ಶಾಲೀಗ್ ಹ್ವಾಪು ಮಕ್ಕಳಿಗೆ ಮಾತ್ರ ಈ ಕಾಗದ ಬರುವ ಭಾಗ್ಯ ಇದ್ದದ್ದ್. ಈಗಿನವರಿಗೆ ನಾನ್ ಎಂತ ಹೇಳ್ತಿದ್ದಿ ಅಂದೆಳಿ ಅರ್ಥ ಆಪುದ್ ಸ್ವಲ್ಪ ಕಷ್ಟುವೆ. ಈಗಿನ್ ಮಕ್ಕಳಿಗೆ ಮೊಬೈಲೆಗೆ ಪೂರಾ ಮೆಸೇಜ್ ಟೈಪ್ ಮಾಡುಕೆ ಬತ್ತಿಲ್ಲ, ಇನ್ನ ಕಾಗದ ಬರಿತ್ರಾ?. ಕಾಗದ ಬಿಡಿ, ಸರಿಯಾಯಿ exam ಬರುಕೆ ಪುರ್ಸೊತ್ತಿಲ್ಲ ಪಾಪ. ಅದೂ ಅಲ್ಲದೆ ಕಾಗದ ಬರಿಯುವುದು ಒಂದು ಕಲೆ. ಎಲ್ಲರಿಗೂ ಕಾಗದ ಬರುಕ್ ಆತಿಲ್ಲ. ಬೇರೆಯವರ feeling ಅರ್ಥ ಮಾಡ್ಕಂಡ್, ಅವರು ನೂರು ಶಬ್ದ ಹೆಳ್ರೆ, ಅದನ್ನ ಎಲ್ಲ ಕೆಂಡಕಂಡ್ ನಾಲ್ಕ್ ಶಬ್ದದಲ್ಲಿ ಅವರಿಗೆ ಅರ್ಥ ಆಪು ಹಾಗೆ ಬರುದಂದ್ರೆ ತಮಶಿ ಅಂದ್ಕಂಡಿರ್ಯಾ?. ಕೆಲವು ಸಲ ಅಂತೂ ಈ ಅಬ್ಬಕ್ಕನಂತವರು ಇಡೀ ಹರಿಕಥೆ ಹೇಳಿ, ಇದನ್ನ ಬರಿ ಮಗಾ.. ಅಂದಾಗ ಅವರಿಗೂ ಕುಶಿ ಆಪೂವಂಗೆ, ಕಾಗದ ಓದುವವರಿಗೂ ಹರಿಕಥೆ ತರ ಇರದೆ, ಬೇಕಾದಷ್ಟೆ ಬರುದು ಇತ್ತಲಾ, ಅದಕ್ಕೆ talent ಬೇಕು ಬಿಡಿ. ನಮಗೆ ಶಾಲೆಯಲ್ಲೂ ಪತ್ರ ಹೆಂಗೆ ಬರಿಕ್, ಯಾರಿಗೆ ಯಾವ ತರ ಕಾಗದ ಬರಿಕ್, ಯಾವ ರೀತಿ ಶುರು ಮಾಡ್ಕ್ ಅಂದೆಳಿ ಎಲ್ಲ ಹೆಳ್ತಿದ್ರ್. ಅಷ್ಟೇ ಅಲ್ಲ examಗೆ ದೂರದಲ್ಲಿರುವ ನಿಮ್ಮ ಗೆಳೆಯನಿಗೆ ಒಂದು ಪತ್ರ ಬರೆಯಿರಿ. ಅಂದೆಳಿಯೂ ಪ್ರಬಂದ ಬರುಕ್ ಹೇಳ್ತಿದಿರ್. ಆ ಕಾಗದ ಬರುದ್ರಲ್ಲಿ ಇಪ್ಪು ಮಜಾ, ಈ ಫೊನೆಗ್ ಸಿಕ್ಕುದಿಲ್ಲ ಬಿಡಿ, ಪೋಸ್ಟ್ ಮ್ಯಾನ್ ಮನಿಗೆ ಬಂದ ಅಂದ್ರೆ, ನಮ್ಮನಿ ಗಂಡ್ ದುಡ್ಡ್ ಕಳ್ಸಿ ಕೊಟ್ಟಿತೇನೊ, ನಮ್ಮನಿ ಹೆಣ್ಣ್, ಬೆಂಗಳೂರಿಗೆ ಹೊಯಿ ಮುಟ್ಟತ್ ಅಂಗರೆ” ಅಂದೆಳಿ ಕುಶಿ ಪಡ್ತಿದಿರ್. ಈಗಂತೂ ಪೋಸ್ಟ್ ಆಫೀಸರ್ in-land letter ಸವಲತ್ತನ್ನೇ ಕಿತ್ತ್ ಬಿಸಾಕಿರ್ ಅಂದೆಳಿ ಮಾಡುವ. ಬರಿ ಕಾಗದ ಬರುದ್ರಲ್ಲಿ ಮಾತ್ರ ಕುಶಿ ಅಲ್ಲ, ಓದುದ್ರಲ್ಲೂ. ಮನಸಿನ ಭಾವನೆ ಶಬ್ದದ ಜೊತಿಗೆ ಸೇರ್ಕಂಡ್ ಕೊಡು ಫೀಲಿಂಗ್ ಫೋನ್ ಅಲ್ಲಿ ಮಾತಾಡುದ್ರಲ್ಲಿ ಸಿಕ್ಕುದಿಲ್ಲ ಬಿಡಿ. ಎಲ್ಲರೂ ಬರೆದ ಪತ್ರನ ಜಾಗ್ರತಿಯಲ್ಲಿ ಇಟ್ಕಂಡ್, ಆಗಾಗ ಓದಿ ಕುಶಿ ಪಡ್ಲಕ್. ಈ ಫೋನ್ ಅಲ್ಲಿ ಇದೆಲ್ಲ ಅತ್ತಾ?.

 -ದಿಲೀಪ್ ಶೆಟ್ಟಿ. 

ಚಿತ್ರ ಕೃಪೆ: ಅಂತರ್ಜಾಲ

ಭಾನುವಾರ, ಡಿಸೆಂಬರ್ 16, 2018

ತುಂಗೆ...

       ವಿಸ್ತಾರವಾದ ಪ್ರಾಂಗಣದ ಮುಂದೆ ಕಾವಲಿಯಂತೆ ಕಾದು ನಿಂತಿರುವ ಹೆಂಚಿನ ಮನೆ. ಮನೆಯ ಪಡಸಾಲೆಯ ಹೊಸ್ತಿಲಿಗಾನಿಕೊಂಡು ತನ್ನದೇ ಲೋಕದಲ್ಲಿ ಬಟ್ಟಲ ಮುಂದೆ, ಮನಃ ಬೆತ್ತಲಾಗಿ ಕಾದು ಕುಳಿತಿದ್ದಾಳೆ. ಜಾತಕ ಪಕ್ಷಿಯಂತೆ ಕಾ.. ಕಾ.. ಎನ್ನುತ್ತಾ ಎಬ್ಬಿಸಿತು ಕಾಗೆ. ತುಂಗಾ... ನೆನೆದಳು. ಕಣ್ಣ ಕಾನನದಿಂದ ಬಂದ, ಹನಿ-ಹನಿ ಹುಣ್ಣು, ತನ್ನದೇ ವೇಗದಲ್ಲಿ ಬಟ್ಟಲು ತುಂಬುತ್ತಿತ್ತು. ಬಟ್ಟಲ ತುತ್ತು, ತುಟಿಯ ಸೊಂಕದೇ, ಕಣ್ಣೀರಲ್ಲೇ ತೇವವಾಯಿತು. ತುಂಗೆ, ಗೋಡೆಗೆ ಆನಿಕೊಂಡು ಮೇಲೆದ್ದಳು.  ಕರಿಯ ಗೊಣಲ್ಲಾಡಿಸಿದ. ಮೆಟ್ಟಿಲ ಬಳಿಯೇ ತುತ್ತಿಗಾಗಿ ಕಾಯುತ್ತಿದ್ದ. ಕರಿಯನ ಜೊಲ್ಲಿಗೆ ಇರುವೆಯ ಸಾಲುಗಳು ಚೆಲ್ಲಾಪಿಲ್ಲಿಯಾಗಿದ್ದವು. ತುಂಗೆ, ಬಟ್ಟಲ ಸರಕನ್ನು ನಾಯಿಯ ತಟ್ಟೆಗೆ ವರ್ಗಾಯಿಸಿದಳು. ಕರಿಯ ಹಸಿದಿದ್ದ. ಮರುಮಾತನಾಡದೇ ಕೆಲಸಕ್ಕೆ ನಿಂತುಬಿಟ್ಟ. ತುಂಗೆಯ ಆದ್ರ ಕರಿಯನನ್ನು ನೋಡಿ, ವಿರಾಮಕ್ಕೆ ಜಾರಿತ್ತು. ಈಗ, ಅವಳ ಬಟ್ಟಲಂತೆ, ಒಡಲು ಕೂಡ ಬತ್ತಿತ್ತು.

          ತುಂಗೆ, ಚೊಚ್ಚಲ ಬಸುರಿ. ಚೊಚ್ಚಲೆಂದೇ ಹೇಳಬೇಕು. ಹಿಂದಿನದ್ದು, ಗಾಳಿ ಸೋಕುವ ಮುನ್ನವೇ ಕೊರಡಾಗಿತ್ತು. ಅದಕ್ಕೂ-ಇದಕ್ಕೂ ನಡುವೆ ಅಂತಹ ಅಂತರವೇನಿರಲಿಲ್ಲ. ಗಂಡಸ್ತನದ ದಬ್ಬಾಳಿಕೆ ಕಾರ್ಯನಿರತವಾಗಿತ್ತು. ತಾಯಿ ತೀರಿಕೊಂಡ ಮೇಲೆ ಮನೆಯ ಕೀಲಿಕೈ ಇವಳದ್ದೇ ಆಗಿತ್ತು. ತುಕ್ಕು ಹಿಡಿದಿದ್ದ ಕೀಲಿಕೈ. ಇವಳಂತೆ, ಇವಳ ಕನಸುಗಳಂತೆ. ಗಂಡ ಎಂದೆನಿಸಿಕೊಂಡವನು ಕಾಮ ಹೀರಿ, ಹಾರಿ ಹೋಗಿದ್ದ. ಅಡಿಗಡಿಗೆ ಗುದ್ದಿ, ಮಾಸದ ಗಾಯ ಮಾಡಿ ಹೋಗಿದ್ದ. ತುಂಗೆ, ಮತ್ತೆ ಪಡಸಾಲೆಯ ಹೊಸ್ತಿಲಿಗಾನಿಕೊಂಡು, ಕಂಬನಿ ಪೋಣಿಸುತ್ತಿದ್ದಾಳೆ. ಅಳು, ಯಾವುದಕ್ಕೆ?. ಓಡಿ ಹೋದ ಗಂಡನಿಗಾಗಿಯೋ, ಇಲ್ಲ ಒಡಲೊಳಗೆ ಚಿಗುರೊಡೆದ ಜೀವಕ್ಕಾಗಿಯೋ?. ಹೆಣ್ಣಿಗೆ ಅಳುವುದಕ್ಕೆ ಕಾರಣ ಬೇಕೆ?. ಹಾಗೆ ಎಲ್ಲದಕ್ಕೂ ಅಳುವವಳಲ್ಲ ಇವಳು. ಗಟ್ಟಿಗಿತ್ತಿ. ಈಕೆಯ ತಾಯಿ ಸತ್ತಾಗಲೂ, ಕುಂದದೇ ಎಲ್ಲವನ್ನೂ ನಿಭಾಯಿಸಿದವಳು. ಗಂಡ ಪಾಪದವನು. ಅಮಲು ನೆತ್ತಿಗೆರಿದಾಗ ಮಾತ್ರ ಕ್ರೂರಿ. ಮನೆಯ ನಾಲ್ಕು ಗೋಡೆಯಾಚೆ ಸಣ್ಣ ಶಬ್ದವೂ ಕಂಪಿಸದಂತೆ ಆಳುವನುಂಡು ಬದುಕುತ್ತಿದ್ದಳು. ಹೊಡೆತದ ಗಾಯಗಳಷ್ಟೇ ಚೀರಾಡುತ್ತಿದ್ದವು.

          ಮೊದಲ ಮಗು ಹೊಟ್ಟೆಯಲಿದ್ದಾಗಲೇ, ಗಂಡನ ದರ್ಪಕ್ಕೆ ಹೆದರಿ, ಹೊರ ಪ್ರಪಂಚದ ವ್ಯಾಮೋಹ ತ್ಯಜಿಸಿರಬೇಕು. ತುಂಗೆ ಸೊರಗಿದ್ದಾಳೆ ಎನ್ನುವುದನ್ನೂ ಲೆಕ್ಕಿಸದೇ ಸೆರಗ ಹಿಡಿದಿದ್ದ ಗಂಡ. ಅವನಿಗಾಗಿ ಅಳುತ್ತಾಳೆಯೇ?. ಅಳಬೇಕೇ?. ಖೂನಿ ಮಾಡದೇ ಇವಳನ್ನು ಉಳಿಸಿದ್ದಾನೆ ಅನ್ನುವುದೇ ಅಚ್ಚರಿ. ಅದೆನೋ, ಒಳ್ಳೆ ಗಳಿಗೆಯಲ್ಲಿ ಇವಳನ್ನು ತ್ಯಜಿಸಿ, ದೂರದ ಊರಿಗೆ ಹೋಗಿದ್ದಾನೆ. ಹೋದವ ಬಾರದಿದ್ದರೆ ಸಾಕು ಎಂದುಕೊಂಡದ್ದೂ ಇದೆ. ತುಂಗೆ, ಮತ್ತೆ ತೇವಗೊಂಡಿದ್ದಾಳೆ. ಹೋದ ಗಂಡ, ಇಂದೇಕೋ ಪದೇ, ಪದೇ ನೆನಪಾಗುತ್ತಿದ್ದಾನೆ. ನೆನಪೆಂದರೆ ನೆನಪಲ್ಲ, ಬರಿಯ ನೆಪ. ಅಸ್ಪಷ್ಟ ಆಕಾರ. ನೆನಪಿಸುವ, ನೆನಪಾಗುವ ಕಾರಣಗಳೇ ಇವಳ ಬಳಿ ಇರಲಿಲ್ಲ. ಈಗ ಈ ನೆನೆಪಿಗೆ ಕಾರಣ ಹೊಟ್ಟೆಯಲ್ಲಿರುವ ಕೂಸು. ಗಂಡನಲ್ಲದಿದ್ದರೂ, ತಂದೆಯಾಗಿರಬೇಕು ಎಂಬ ಆಶೆ. ತಂದೆ ಇರದೇ ಬದುಕ ಕಟ್ಟಿ ಕೊಂಡ ನನ್ನ ಹಾಗೆ, ತನ್ನ ಮಗು ಆಗಿಬಿಟ್ಟರೆ ಎನ್ನುವ ಭಯ. ಅದೆಷ್ಟೋ ಹೆಂಗರುಳ ಕೂಗು, ಹೀಗೇ ಮಿಡಿಯುತ್ತದೆ, ತನಗಾಗಿಯಲ್ಲ, ತನ್ನವರಿಗಾಗಿ. ತುಂಗೆ ಬತ್ತುವವಳಲ್ಲ. ಆದರೂ ಸೋರುತ್ತಿದ್ದಾಳೆ, ಪಸೆ ಹಿಡಿದ ಮರಳ ಹಾಗೆ, ಇಷ್ಟಿಷ್ಟೆ....

  -ದಿಲೀಪ ಶೆಟ್ಟಿ.

ಚಿತ್ರ ಕೃಪೆ: ಅಂತರ್ಜಾಲ.

ಬುಧವಾರ, ಅಕ್ಟೋಬರ್ 18, 2017

ದಿವಾಳಿ ಹಬ್ಬ - ಬೂಧ್ ನೀರ್

          ನಾಗುವಕ್ಕನ ಮನೆಗೆ ಏಗಳಿಕು ದೀಪಾವಳಿ ಹಬ್ಬಕ್ಕೆ ಪಟಾಕಿ ರಾಶಿ ಬಂದು ಉದರ್ತಿರತ್ತ್. ಬೆಂಗ್ಳೂರಿಂದ ಉಮೇಶ-ಗಣೇಶ ಸಾಲುವೋ-ಸೂಲುವೋ ಮಾಡಿ, ಪಟಾಕಿ ಚೀಟಿ ಹಾಕಿ, ಊರಿಗೆ ಒಂದ್ ಗೋಣಿಚೀಲ ಪಟಾಕಿ ಕಳಿಸ್ತಿದ್ದಿರ್. ಅದ್ರೆಗ್ ಅರ್ದಕ್ಕರ್ದ ಟುಸ್ಸ್ ಅಂತಿದ್ರೂ, ಉಳಿದ ಅರ್ದ ಗೋಣಿಚೀಲ ಒಳ್ಳೆ ಸೌಂಡ್ ಮಾಡ್ತಿದಿತ್. ಆ ಪಟಾಕಿ ಶಬ್ದದಲ್ಲೇ ಗೊತ್ತಾತಿದಿತ್, ಇದು ತೆಕ್ಕಟ್ಟೆ ಸಾಯಿಬ್ರ ಅಂಗಡಿ ಪಟಾಕಿಯೂ ಅಲ್ಲ, ಕೋಟ ಮಾಸ್ಟರ್ ಶೊಪ್ ಅಂಗಡಿ ಪಟಕಿಯೂ ಅಲ್ಲ, ಇದು ಗ್ಯಾರಂಟೀ ಬೆಂಗ್ಳೂರ್ ಪಟಾಕೀಯೆ ಅಂದೇಳಿ. ನಮ್ಮನಿ ಕತಿಯೆ ಬೇರೆ. ಎಲ್ಲರೂ ದೀಪಾವಳಿ ದಿನವೇ ತುಳಸಿ ಪೂಜಾ ಇಟ್ಕಂಡ್ರೆ, ನಮ್ಮನೆಗೆ ಆ ಟೈಮೆಗೆ ತುಳಸಿ ಪೂಜೆ ಮಾಡ್ತೀರ್ಲಿಲ್ಲ, ಅದರ ಬದಲಾಯಿ ನಾವು ನವರಾತ್ರಿ ಶುರುವಿಗೆ ವಸಂತ ಮಾಡ್ತಿದಿತ್. ಇದೆ ನೆಪ ಸಾಕಿದಿತ್ ನಮ್ಮ ಅಜ್ಜಯ್ಯಂಗೆ. “ತುಳಸಿ ಪೂಜಾ ಇಲ್ಲ ಎಂತ ಇಲ್ಲ, ಪಟಾಕಿ ಯಂತಕೆ ಗಡಾ ನಿಂಗೆ?. ಹೊಗ್ ಹೊಗ್ ತೆವಡ್ಸಕೋ.” ಅಂತಿದಿರ್. ನಾವು ಬಿಡತ್ತಾ, ಸ್ವಲ್ಪ over-acting ಮಾಡಿ, ಮರ್ಕದರ್ ಕಂಡೆಗ್ ಮಾಡಿ ಒಂದ್ 50 ರುಪಾಯಿ ಪಟಾಕಿಯಾದ್ರೂ ವ್ಯವಸ್ಥೆ ಮಾಡ್ಕಂತಿದಿತ್. ಇನ್ನೂ ಯಾರಾದ್ರೂ ಹಬ್ಬಕ್ಕೆ ಅಂದೇಳಿ ಮನಿಗೆ ಬಂದ್ರೆ, 200 ರೂಪಾಯಿ ಪಟಾಕಿಗೆ ಏನೂ ಕಮ್ಮಿ ಇಲ್ಲ.

          ಅಂತೂ ಪಟಾಕಿಗೆ ಒಂದ್ ಹಜಿ ಹಾಕಿ ಆರ್ ಮೇಲೆ, ಸಾಯಂಕಾಲ ಆಪೂದ್ರೊಳ್ಗೆ ಬೂದ್ ನೀರ್ ಹರಿಗೆ ಜಲ್ಲಿ ಹೂ ತಕಂಡ್ ಬರ್ದಿರೆ ಮತ್ತೆ ಅಜ್ಜಯ್ಯನ ಕೆಂಗಣ್ಣಿಗೆ ಗುರಿ ಅಯ್ಕಾತ್ತ್ ಅಂದೇಳಿ ಮದ್ಯಾನ ಗುಡ್ಡೆಗೆ ಆಡಿ ಸುಸ್ತಾದ ಕೂಡ್ಲೆ ಎಲ್ಲ ಒಂದ್ meeting ಮಾಡ್ತ್. ಜೆಲ್ಲಿ ಹೂ ಬೇಕು, ಕಡೆಕ್ ನಾಳಿಗೆ ಬಲಿ ಪೂಜಕ್ಕೆ ಜೆಲ್ಲಿ ಎಲಿಯೂ ಬೇಕು. “ಹ್ವಾ, ಚಪ್ಪನ್ ಕೆರೆಗೆ ಹ್ವಾಪ ಮರೆ, ಹೋದ ವರ್ಷ ಅಲ್ಲಿಂದನೇ ಅಲ್ದನಾ ನಾವು ತಕಂಡ್ ಬಂದದ್ದ್” ಅಂದ ದ್ರುವ್ವೆಶ. “ಆ ಕೆರಿ ಬತ್ತಿ ಹೊಯಿ ಎಷ್ಟ್ ದಿನ ಆಯ್ತ್ ಮರೆ. ಚಾಬ್ಲ್ ಎಲ್ಲ ಎತ್ತಿ ಹಾಕಿ ನಾಕ್ ಮುಯಿಡ, ಶಿಲೋಪಿ ಹಿಡಿಲ್ಯನ ಹೋದ ತಿಂಗಳು.. “ ಅಂದ ಹೊಟ್ಟಿ ಗಣೇಶ. ನಾವು ಹೀಂಗೆ ಮಲ್ಯಾಡಿ ಬದಿಗೆ ಹ್ವಾಪ ಮರೆ, ಅಲ್ಲಿ ಸುಮಾರ್ ಕ್ವಜಿ ಹ್ವಂಡ ಇತ್ತ್. ಹಾಂಗೆ ಲೈಕ್ ಮಾಡಿ ಮಿಂದುಕಂಡು, ಜೆಲ್ಲಿ ಹೂ, ಜೆಲ್ಲಿ ಎಲೆ ಎಲ್ಲ ತ ಕಂಡ್ ಬಪ್ಪುವ ಮರೆ..” ಅಂದೇಳಿ ಪ್ರವೀಣ ಹೇಳ್ರ್ ಕೂಡ್ಲೆ, ಸುಜನ್ನ ಗಂಡಿನ “ಮನಿಗೆ ಹೊಯಿ ಒಂದ್ ಟವಲ್ ತಕಂಡ್ ಬಾ, ಹಾಂಗೆ ಜೆಲ್ಲಿ ಹೂ ತಪ್ಪುಕ್ ಹ್ವಾತಿತ್ತ್ ಅಂದೇಳಿ ಅಜ್ಜಯ್ಯಂಗೆ ಹೇಳು” ಅಂದೆಳಿ ದೊಡ್ಡ್ ಜಾಪೆಗೆ ಕಳ್ಸಿ ಕೊಟ್ಟಿ. ನಾವು ಇಲ್ದೇ ಇದ್ರೆ ಮನೆಯವರು ಎಷ್ಟ್ ಕಷ್ಟ ಪಡ್ಕಿದಿತ್ ಕಾಣ್ ಅನ್ನೋ ಶೂಂಟಿ ಎಲ್ಲರ ಮುಖದೆಗೆ ಪಳಗುಟ್ಟತ್ತಾ ಇದಿತ್.

          ಎಂಟು ಹತ್ತು ಜನರ battalion ದಿವಾಳಿ ಹಬ್ಬದ ಪೂರ್ವ ತಯಾರಿಯಲ್ಲಿ ಇಷ್ಟೊಂದ್ involve ಆತಿದ್ರ್ ಅಂದ್ರೆ ಮನಿಯವರಿಗೆ ಇನ್ನ್ ಎಂತ ಬೇಕ್ ಅಲ್ದೆ? ಅಂದೇಳಿ ಮನಸಿನಲ್ಲೆ ದೊಡ್ಡ್ ಲಾಡ್ ಕಂಡೆಗೆ ಯಾಸ ಮಾಡ್ತಾ, “ನಮ್ಮನೆಗೆ ಇಷ್ಟಪ ಪಟಾಕಿ ತಂದಿರ್”, “ನಮ್ಮನೆಗೆ ಅಣ್ಣ ಬತ್ತಿ ಅಂದವ್ನ್ ಇನ್ನೂ ಬರ್ಲಿಲ್ಲ ಮರೆ”, “ನಮ್ಮನೆಗೆ ಬಿಡಿ ಪಟಾಕಿ ಮಾತ್ರ ತಕಂಡ್ ಬಂದಿರ್”, “ನಾನ್ ಈ ಸಲ ಮೂಕಕ್ಕನ ಮನಿ ತುಳಸಿ ಪೂಜಕ್ಕೆ ಹ್ವಾತಿ ಮರೆ, ನಮ್ಮನೆಗೆ ಸೂತಕ ಅಂಬರು” ಹೀಂಗೆ ಬೇಕಾದ್ದ್ ಬ್ಯಾಡದೆ ಇದ್ದದ್ದ್ ಮಾತಾಡ್ಕಂತ ಕೊಜಿ ಹೊಂಡ ಹುಡ್ಕತ ಹೊರಡ್ತ್. “ಸುಕೇತಣ್ಣ ಸುಕೇತಣ್ಣ ನಿಮ್ಮನೆಗೆ ಬಾಬಣ್ಣ ಜೆಲ್ಲಿ ಹೂ, ಎಲಿ ಎಲ್ಲ ತಕಂಡ್ ಬಂದಿರ್ ಅಂಬ್ರ್. ನೀವ್ ತಪ್ಪುದ್ ಬ್ಯಾಡ ಅಂಬ್ರ್ ..” ಅಂದೆಳಿ ಒಂದೇ ಉಸ್ರೆಗ್ ಓಡಿ ಬಂದು ಹೆಳ್ದ ಸುಜನ. ಇವ್ನಿಗೂ ಅದೇ ಬೇಕಿದಿತ್ ಅಂದೆಳಿ ಮಾಡ್ವ. ಕೂಡ್ಲೆ ಎಲ್ಲ ಸುಕೇತನ ಹತ್ರ ಹೊಯಿ, “ಸುಕೇತ, ನಂಗ್ ಸ್ವಲ್ಪ help ಮಾಡ್ ಮಾರಾಯ, ಕಡಿಕೆ ಶುಂಠಿ ಸೋಡಾ ಕೊಡಸ್ತೆ, ಬಾಜಲ್ ಕೊಡಸ್ತೆ, ಜಯರಾಮಣ್ಣನ ಅಂಗಡೆಗೆ ಪಪ್ಸ್ ತೆಗ್ಸಿ ಕೊಡ್ತೆ“ ಅಂದೆಳಿ ಹತ್ತು ಹಲವು ಆಸೆ ತೊರ್ಸುಕೆ ಶುರು ಮಾಡಿದ್ರು. “ಆಯ್ತ್ ಆಯ್ತ್ ಎಲ್ಲರಿಗೂ ತೆಗ್ದ್ ಕೊಡ್ತಿ, ನಿಮ್ಮ್ ಹರ್ಮಯ್ಕು ನಿಲ್ಲಿಸಿ. ಮೊನ್ನೆ 10 ರುಪಾಯಿ ಬೆಟ್ಟ್ ಗೆದ್ದದ್ದ್ ಮೊದ್ಲು ಕೊಟ್ಟು ಸಾಯ್ನಿಯ” ಅಂದೆಳಿ ಸುಕೇತ ಬುಸ್ಗುಟ್ಟುಕ್  ಶುರು ಮಾಡುಕು ಎಲ್ಲ ಬಾಯಿ ಮುಚ್ಕಂಡ್ ಜೆಲ್ಲಿ ಹೂ ಹುಡ್ಕುಕ್ ಶುರು ಮಾಡ್ರ್.


          ಅಂತೂ ಇಂತೂ ಎಲ್ಲರ್ ಮನಿಗೆ ಬೇಕಾಪುವಷ್ಟು ಜೆಲ್ಲಿ ಹೂಗು, ಜೆಲ್ಲಿ ಎಲೆ ತಕಂಡ್, ಕೊಜಿ ಹೊಂಡದಲ್ಲಿ ಹೊಡ್ಕಿ, ಮನಿ ಬದಿಗೆ ಬಂತು. ಜೆಲ್ಲಿ ಎಲೆ, ಜೆಲ್ಲಿ ಹೂವನ್ನು ಹುರಿ ಬಳ್ಳೆಗೆ ಕಟ್ಟಿ, ಬಾವಿ ಒಳಗೆ ಬಾಡದೆ ಇರಲಿ ಅಂದೆಳಿ ಇಳ್ಸಿಯೂ ಆಯ್ತು. ಒಂದು ಜೆಲ್ಲಿ ಹೂವನ್ನು ಮುರ್ದು ಒಂದು ಜೆಲ್ಲಿ ಹಾರನೂ ready ಮಾಡಿ ಆಯ್ತು. ಸಾಯಂಕಾಲ ಆದ ಕೂಡ್ಲೆ, ಬೂಧ್ ನೀರ್ ತುಂಬಿಸುವ ಕೆಲಸ. ಮಸಿ ಹಿಡದ್ದ್ ಮೀಯುವ ಹರಿನ ಅಮ್ಮ ಸಮಾ ಮಾಡಿ ತಿಕ್ಕಿ ಬೆಳ್ಳಗ್ ಮಾಡಿಟ್ಟಿದ್ದಳ್ಳ್. ಮದ್ಮಗ್ಳ ಕಂಡೆಗೆ ನಮ್ಮನಿ ಹರಿ ನಾಚ್ಕಂತಿಪ್ಪತಿಗೆ, ಅದರ ಮೈ ಮೇಲೆಲ್ಲಾ ಶೇಡಿ ರಂಗೋಲಿ ಹಾಕಿ, ಕುಂಕುಮದ ಬಟ್ಟು ಇಟ್ಟು, ಜೆಲ್ಲಿ ಹೂವನ್ನ ಮೀವರಿ ಕೊರಳಿಗೆ ಹಾಕಿ ಸಿಂಗಾರ ಮಾಡ್ದಳ್. ಹರಿ ಚಂದ ಗ್ವಾಂಪಿ ಆಯ್ತ್. ಅಂತೂ ಇಂತೂ ಮೀವರಿಗೂ ವರ್ಷಕ್ಕೊಂದ್ ಸ್ನಾನ ಆದಂಗೆ ಆಯ್ತ್ ಅನ್ನಿ. ಇದಾದ ಮೇಲೆ main ಪ್ರೊಗ್ರಾಮ್. ಹರಿಗೆ ನೀರು ತುಂಬುದು. ಅಕ್ಕ ಮತ್ತೆ ಅಮ್ಮ ಬಾಮಿಯಿಂದ ನೀರ್ ಎತ್ತಿ ಹರಿಗೆ ತುಂಬ್ಸುಕೆ ಶುರು ಮಾಡಿದ್ರು. ನಾನು ಅವರ ಹಿಂದೆ ಜಾಗಟೆ ಬಾರಿಸ್ತಾ ಅವರನ್ನೇ follow ಮಾಡಿದೆ. ಅಂತೂ ಹರಿ ತುಂಬಿತು. ಹರಿಗೆ ಕಿಚ್ಚ್ ಹಾಕಿ ನೀರು ಕಾಯುಕೆ ಶುರು ಆಯ್ತು. ಇನ್ನೆನಿದ್ರೂ ಬೆಳಿಗ್ಗೆ ಎಣ್ಣೆ ಹಚ್ಕಂಡ್, ಬೂಧ್ ನೀರ್ ಸ್ನಾನ ಮಾಡಿದ್ರೆ ಆಯ್ತ್. ಬೆಳಿಗ್ಗೆ ಬೇಗೆ ಅಜ್ಜಯ್ಯನ ಓಲಗ ಶುರುವಾದ ಕೂಡ್ಲೆ ಕಣ್ಣು ಉಜ್ಕಂಡು ಎದ್ದು, ಎಣ್ಣೆ ಮೈ ತುಂಬಾ ಹಚ್ಕಂಡು, ಬೂಧ್ ನೀರು ಸ್ನಾನ ಮಾಡ್ಕಂಡು ಮೆಂತೆ ಕಡುಬು ಮುಕ್ಕುಕೆ ಶುರು ಮಾಡ್ವತಿಗೆ “ಗಡಾ, ಬಲಿ ಪೂಜಕ್ಕೆ ನೆಣಿ ಕೋಲ್ ಮಾಡಿ ಇಡ್ಕ್, ಬೇಗೆ ಬಾ ಆಡ್ಕಂಡ್..” ಅಂದ್ರು ಅಜ್ಜಯ್ಯ. ಬಲಿ ಕರುಕ್ ಹ್ವಾದ್ದ್ ಕಥೆನ ಇನ್ನೊಂದ್ ಸಲ ಸಿಕ್ಕತ್ರಿಯಲ್ಲೇ ಮಾತಾಡುವ ಆಗ್ದಾ?. 

-ದಿಲೀಪ್ ಶೆಟ್ಟಿ.