ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಆಗಸ್ಟ್ 29, 2011

ಮತ್ತದೇ ಬೇಸರ...


     ಮತ್ತದೇ ಬೇಸರ....
      ನೆನಪಿನಂಬುದಿಯಲಿ ಎಷ್ಟೇ ಸಲ  ನೆನೆದೆದ್ದರು ಪ್ರತಿ ಭಾರಿಯೂ ನಿನ್ನದೇ ನೆನಪು, ನಿನ್ನದೇ ಒಲವು, ನಿನ್ನದೆನ್ನುವುದು ನನ್ನದೆನ್ನುವ ಖುಷಿ, ಹಿತ, ಸ್ತಿಮಿತ. ಮನಸ ಮಾನಸದೊಳಗೆ ಮಿಡುಕಿ ಮರೆಯಾಗೋ ನಿನ್ನ ಬಿಂಬವ ಹುಡುಕ ಹೊರಟಾಗಲೆಲ್ಲ ಮಿನುಗೋ ನಿನ್ನ ಕಣ್ಣ ಕೋಲ್ಮಿಂಚು ನನ್ನೆದೆಯ ಕದ ತೆಗೆದು ಕಥೆ ಕಟ್ಟಿ ಕೊನೆಗೊಮ್ಮೆ ಎದೆಯ ಮೆಟ್ಟಿ ಘಾಸಿ ಗೊಳಿಸಿ ಬಿಸಿ ನೀರ ಆವಿಯಂತೆ ಮಾಯಾವಾಗುವುದುಂಟು. ನಿನ್ನೊಡನಿದ್ದ ಪ್ರತಿ ಗಳಿಗೆ ಪಂಚಾಮೃತ. ನಿನ್ನ ದನಿ, ಮುಂಗೋಪ, ತುಂಟತನ, ಗುಳಿ ಬೀಳೊ ಗಲ್ಲ ವರ್ಣಿಸಲಸದವಳ. ಪ್ರತಿ ನೆನಪಿನ ಜೊತೆ ಬರುವ ನಿನ್ನ ಆ ನಗು ಮರುಭೂಮಿಯಲಿ ದುಮ್ಮಿಕ್ಕೋ ನೀರ ದಿಬ್ಬದಂತೆ ಮನ-ಮಾನಸಕ್ಕೆ  ಚೈತನ್ಯ ದೀವಿಗೆ.

      ಸಮುದ್ರದ ದಡದ ಗಾಳಿ ಗೋಪುರದಲಿ ಮರಿ ಬೆಕ್ಕಿಗಾಗಿ ಗೋಳಿಟ್ಟು ಅತ್ತಿದ್ದು  ಇನ್ನು ಹಾಗೆ ಅಕ್ಷಿಪಟಲದ ಮುಂದೆ ಅಚ್ಚಳಿಯದೆ ಕೂತಿದೆ. ಅಂದು ತರಕಾರಿ ಮಾರುವವಳ ಜೊತೆ ಒಂದು ರೂಪಾಯಿಗೆ ಅರ್ದ ಗಂಟೆ ಜಗಳವಾಡಿದ್ದನ್ನು ನೆನಪಿಸಿಕೊಂಡರೆ ಮುಗ್ದ ಮನಸಿನ ತುಂಟಿ ಇವಳೆಯ ಎನ್ನುವಷ್ಟು ಆಶ್ಚರ್ಯವಾಗುತ್ತದೆ. ಬಲ್ಲೆ ನಿನ್ನ  ಮನಸನ್ನ ಎಂದು ಬರಿದೆ ಜಂಬ ಕೊಚ್ಚುತ್ತಿದ್ದೆ. ಹೆಣ್ಣ ಮನಸದು ಸಮುದ್ರ,  ಒಮ್ಮೆ ಸುನಾಮಿ ಮತ್ತೆ ತಂಗಾಳಿ. ಏರಿಳಿತಗಳ ಲೆಕ್ಕ ಅವಳಿಗೂ ಸಿಗದು. ಮಕ್ಕಳೊಂದಿಗೆ ಮಗುವಾಗಿ, ಸಕ್ಕರೆಯ ಮಾತಾಡಿ ಎಲ್ಲರನು ತನ್ನೆಡೆಗೆಳೆವ ಅಯಸ್ಕಾಂತ ಅವಳು. ಅಂದು ಜಾತ್ರೆಯ ದಿನ ಜಗುಲಿಯ ಪಕ್ಕ ನನ್ನ ನೋಡಿ ನಗುವ ಚೆಲ್ಲಿ ಹೋಗದಿರೆ ಇಂದು ನನ್ನೆದೆಯ ತೇರಲಿ ನಿನ್ನ  ಕುಳ್ಳಿರಿಸಿ ನನ್ನ ನೋಡುವ ನಾನು ನಂದಿ ಹೋಗಿರುತ್ತಿದ್ದೇನೆನೋ. ನಿನ್ನ ಕಣ್ಣ ಭಾಷೆ ಸಣ್ಣದೊಂದು ಬರವಸೆಯ ಕೊಂಡಿ ಕೊಟ್ಟು ನೊಂದ ಜೀವದ ಜೊತೆ ಜಂಟಿಯಾಗುವ ಆಣೆ ಮಾಡಿತು.

      ಜಡಿ ಮಳೆಯಲಿ ಎದೆ ಕೊಡವಿ ಮರುಗುವ ವೇಳೆ ನೀನಲ್ಲದಿರೆ ಮಳೆ ನೀರಲೂ ಕಣ್ಣ ಹನಿಯನು, ವದ್ದೆ ಕೆನ್ನೆಯನು ವರೆಸಿ , ನೇವರಿಸಿ ಮುತ್ತ ಮಳೆಯ ಚೆಲ್ಲುವವರಾರು?. ನೀನಿಲ್ಲದಿರೆ  ಅರ್ಧ ರಾತ್ರಿಯಲಿ ನಿದ್ದೆ ಬಾಗಿಲಲಿ ಬಂದು ಗುದ್ದಿ ಜಗಳವ ಮಾಡುವವರಾರು? ನೀನಿಲ್ಲದಿರೆ  ಸಂಜೆ ಕರಗುವ ವೇಳೆ ಮೆತ್ತಗೆ ಮುತ್ತನು ಕೊಟ್ಟು 'ಛೀ ತುಂಟ' ಎನ್ನುತ ಅಡವಿಕೊಳ್ಳುವರಾರು? ನೀನಿಲ್ಲದಿರೆ ಕಷ್ಟದ ಬಿಸಿ ಬಾಣಲೆಯಲಿ ಬೆಂದು ಬಾಡುವಾಗ ಕೈಯ ನೀಡಿ ಮೇಲೆತ್ತುವವರರಾರು? ನನ್ನ ನಿನ್ನೆಯ ತುಂಬಾ ನಿನ್ನ ನಗುವಿನ ಬಿಂಬ. ನಿನಪಿನ ಹೊತ್ತಿಗೆಯ ತುಂಬಾ ಬಣ್ಣ ಬಣ್ಣದ ಕವನ-ಕದನ. ಮೊಗಕ್ಕೊಂದು ಮಂದಹಾಸ, ಕಣ್ಣಿಗೊಂದು ತಿಳಿ ತಂಪು. ನಿನ್ನೆಯ ಒಳಗೆ ಬೀಗ ಜಡಿದು ಕೀಲಿ ಕೈ ಮರೆತು ಇದ್ದು ಬಿಡುವ ಆಸೆ. ನನ್ನ ನಿನ್ನೆಯಲ್ಲಿ ನೆಮ್ಮದಿ ಇದೆ, ಕನಸಿದೆ, ಎಲ್ಲದಕ್ಕಿಂತ ಹೆಚ್ಚಾಗಿ ನೀನಿರುವೆ. ವಾಸ್ತವಕ್ಕೆ  ಇಳಿದಾಗ ಮತ್ತದೇ ಬೇಸರ, ಅದೆ ಸಂಜೆ, ಅದೆ ಏಕಾಂತ....


-ದಿಲೀಪ್ ಶೆಟ್ಟಿ 

ಗೆಳತಿ

ಮೆಲ್ಲುಸಿರು ನಿನ್ನುಸಿರಿಗೆ ತಾಕದಿರೆ,
ಚಂದ್ರ ನಕ್ಷತ್ರದ ಜೊತೆ ನೀ ನಿಲ್ಲದಿರೆ,
ದಣಿದ ಮನಸಿನ ದುಗುಡವ ನಿನ್ನೆಡೆ ಹೇಳದಿರೆ,
ಕೆನ್ನೆಗೆ ಮುತ್ತಿಕ್ಕುವ ಕೂದಲೆಳೆಯ ನೇವರಿಸದಿರೆ,
ಹಿಡಿ ನಗುವಿನೌತಣದಿ ತೃಷೆಯ ನೀಗಿಸದಿರೆ,
ತುಟಿಗೊಂದು, ಗಲ್ಲಕೊಂದು, ಹಣೆಗೊoದು ಮುತ್ತ ಪೋಣಿಸದಿರೆ,
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

ಮನಸು ನನ್ನದು, ಮನವು ನಿನ್ನದು,
ಮದುರ ಭಾವನೆ ಬೆರೆತು ನಮ್ಮೊಳು
ಮರೆತು ಜಗವನು, ಮೆರೆವ ಮರೆಯೊಳು.
ಮರುಗುತಿಹೆನು ಮರೆಯಲಾರದೆ,
ಮರೆವ ಮಾತದು ಮರುಗಿ ಹೋಗಿದೆ.
ಮೂಳೆ ಮಾಂಸಕೆ ಮತ್ತೆ ಮತ್ತನು
ಮೆತ್ತಿ, ಮುತ್ತಿ, ದಿವ್ಯ ಶಕ್ತಿಯ ನೀಡು.
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

ಮನ್ನಿಸಿಬಿಡು ಒಂದು ಸಲ, ಕೊನೆಯ ಸಲ,
ಕೆಟ್ಟ ಗಳಿಗೆ, ಕೆಟ್ಟು ಕೂತಿಹೆ,
ಬಿಟ್ಟು ಬಿಡು, ಬೆಟ್ಟು ಮಾಡಿ ತೋರಿಸಬೇಡ,
ತಪ್ಪು ನನ್ನದೇ, ತೆಪ್ಪಗಿರದೆ ತಪ್ಪಮಾಡಿದೆ.
ಒಪ್ಪಿಕೊಂಡರೂ, ಅಪ್ಪಬರದೇ,
ಕಾಡುತಿಹುದು ಒಂಟಿ ಬಾಳು,
ಗೆಳತಿ, ಸಂಜೆ ಕತ್ತಲಲಿ ಏಕಾಂಗಿ ನಾನು.

-ದಿಲೀಪ್ ಶೆಟ್ಟಿ.



ಶುಕ್ರವಾರ, ಆಗಸ್ಟ್ 26, 2011

ಓ ದೇವ


ಓ ದೇವ....

ಓ ದೇವ .....
ಮನ್ನಿಸು, ನನ್ನನೊಮ್ಮೆ ಮುದ್ದಿಸು.
ಹಿಂಜರಿಯ ಬೇಡ, ಹೀoಕರಿಸ ಬೇಡ.
ಎದೆಗೆ ಅಪ್ಪಿ, ಉದ್ದರಿಸು.
ಹದ ಮರೆತಿದ್ದೆ, ಮಿತಿ ಮೀರಿದ್ದೆ.
ಅದ ಮರೆತು, ಮತ್ತೆ ಮೆರೆಸು.

ಮನದ ಕೊಳೆಯ ಕಲೆಯು
ಕೊಳೆತು ಕಾರುತಲಿತ್ತು,.
ಕಾಮದ ಕಾಗೆಯ ಕೂಗಿನ ಕಂಪದು
ಕಂಪಿಸಿ ಕೆಮ್ಮುತಲಿತ್ತು.
ಜವ್ವನದ ಉನ್ಮಾದದ ಮದ
ಮಸಣದ ಹೂವಿಗೂ ಹಲುಬುತಲಿತ್ತು.
ಕಾಲ್ ತೊಡೆಗಳ ಬಲ 
ಬಳುಕುವ ಸೊಂಟದ ಸದೆ ಹುಡುಕುತಲಿತ್ತು.

ಅಹಂಕಾರದ ಹದ ತಪ್ಪಿ, ಹೆದರಿಕೆಗೆ ಹೆದರಿಸಿ
ಕತ್ತ ಸಡಿಲಿಸಿದ ಕುನ್ನಿಯಂತೆ
ಕಿತ್ತು ತಿನ್ನಲು ಹವಣಿಸುತಲಿತ್ತು
 ಕೆನ್ನೆಗುಳಿ ಮೇಲೆ ರೋಷಾದ್ವೇಷದ ಜ್ವಲೆ
ಜ್ವಾಲಾಮುಖಿಯನೇ ಜ್ವಲಿಸಿ ಪ್ರಜ್ವಲಿಸುವಂತಿತ್ತು..

ಅಬ್ಬರದ ಆರ್ಭಟವು ಸಮುದ್ರದಲೆಗಳನೂ
ನಿಬ್ಬೆರಗಿಸಿ ಬೊಬ್ಬೆ ಇಡಿಸುತಲಿತ್ತು.
ಲಜ್ಜೆಯ ಗೆಜ್ಜೆಯನು ಮಜ್ಜಿಗೆಯ ಮಾಡಿ
ಮುಜುಗರದ ಮಜವ  ಮಿಡು-ಮಿಡುಕಿ ಮೊಗೆದು
ಭುವಿಯ ಬಸಿರ ಬಗೆವ ಬಗೆಯ ಬಗೆಗೆ
ಯೋಚಿಸುವ ಕುತಂತ್ರದ ಬಲೆ ಶಕುನಿಯನೂ 
ಶಂಕಿಸುತಲಿತ್ತು.

ಬೆತ್ತಲ ಬಾಳದು ಬತ್ತದೆ ಇದ್ದಿತೆ?
ಸತ್ತರು ಹೋಗದು ಮೆತ್ತಿದ ಪಾಪ.
ಕತ್ತಲೆ ಕ್ರಮಿಸಿದೆ, ಕೊಬ್ಬನು ಇಳಿಸಿದೆ
ತಪ್ಪದು ಆಗಿದೆ. ತಿಪ್ಪೆಗೆ ಸೇರಿದೆ.
ಕ್ಷಮಿಸು ಮಹಾಶಯ, ನಿನ್ನೆಡೆ ಬರುತಿಹೆ
ಮೆಲ್ಲಗೆ ಮಲಗಿಸು, ಮನ್ನಿಸಿ ಮಣ್ಣಾಗಿಸು.

-ದಿಲೀಪ್ ಶೆಟ್ಟಿ.

ಗುರುವಾರ, ಆಗಸ್ಟ್ 25, 2011

ಹೆಡಿಮಂಡಿ(ಕುಂದಾಪ್ರ ಕನ್ನಡ)


ಹೆಡಿಮಂಡಿ...

ಹೆಡಿಮಂಡಿ ಬ್ಯಾಟ್ ಹಿಡ್ಕಂಡ್,
ಹ್ವಳಿ ಬದೆಗ್ ಆಡ್ವತಿಗ್
ಹ್ವರಿ ಹೊತ್ಕನ್ಡ್ ನಮ್ ಅಮ್ಮ
ಹಡಿ ಮಾಡ್ತಿದ್ದ್ ನಮ್ಮನ್ ಕoಡ್
ಹೆರಿ ಅಜ್ಜಿಗ್ ಜಕ್ಣಿ ಬಂದoಗ್
ಹ್ವರಿ ಹೊತಾಕಿಕಿ, ಹಿಡಿಸೂಡಿ ಹಿಡ್ಕಂಡ್
ಹ್ವಳಿ ಹತ್ರಕ್ ಓಡ್ ಬಂದ್
"ಎ ರಂಡಿ ಗಂಡೆ, ಹುಲ್ಕುತ್ರಿ ಮಡಂದ್ರೆ
ಹೆಕ್ಕತಿಂಬುಕ್ ಹ್ವಾತ್ಯ??
ಗ್ಯಾದ್ದಿಗ್ ಗ್ವಬ್ರ  ಹಾಕಂದ್ರೆ
ಎದಿ ನೀಡ್ಸ್ಕoಡ್ ನ್ಯಡಿತ್ಯ??
ಕಿಚ್ಚ್ ವಟ್ಟುಕ್ ಸೌದಿ ಇಲ್ಲ,
ಹ್ಯಾಡಿಮಂಡಿ ಬ್ಯಾಟ್ ಬೇಕಾ??"

ಇಷ್ಟಪ ಹೇಳ್ವತಿಗ್ ನoಗ್ ಸುಮ್ನಯಿಕಂಬುಕ್ ಆತ್ತ?
ಮುಕದ್ ಮೇಲ್ ಮೀಶಿ ತೊರ್ಲ ಅಂದ್ರೆ
ಅವ್ಳ್ ಕಣ್ಣ್ ಕಿಚ್ಚಿಡ್ಕ ಹೊಯ್ತಾ??.
ಇನ್ನ್ ಸುಮ್ನಿದ್ರ್ ಆಪ್ದಲ್ಲ, ಯಂತಾರೂ ಮಾಡ್ಕ್ ಅಂದಳಿ
ಬ್ಯಾಟ್ ಹಿಡ್ಕಂಡ್, ಚಡ್ಡಿ ಕಟ್ಕಂಡ್
ಹಿಂದೆ ಮುಂದೆ ಸಮ ಕಂಡ್ಕಂಡ್
"ಸುರೆಶಾ ಓಡ್,  ಇವ್ಳ್ ಕೈಗ್ ಸಿಕ್ರೆ
ಬೆನ್ನ್ ವಚ್ಚಿ, ಬರಿ ಹಾಕ್ತಳ್"
ಅಂದಳಿ ಕಾಲ್ ಕಿತ್ತಿ.
ಅದೆoತೊ ಹೆಳ್ತ್ರಲ:
ಬೀಸೊ ದೊಣ್ಣೆಯಿಂದ ತಪ್ಪಸ್ಕೊoಡ್ರೆ
ನೂರ್ ವರ್ಷ ಆಯಸ್ಸು.

-ದಿಲೀಪ್ ಶೆಟ್ಟಿ

ಶನಿವಾರ, ಆಗಸ್ಟ್ 13, 2011

ಗಡಿಯಾರ


ಗಡಿಯಾರ

ಜಗವ ನೆತ್ತಿ, ಜಗವ ನಡೆಸಿ
ಜಗವನುದ್ದರಿಸುವ
ಜಗ-ಜಾದುಗಾರ
ಗೋಡೆ-ಗಡಿಯಾರ.
   -ದಿಲೀಪ್ ಶೆಟ್ಟಿ

ಸ್ವಾತಂತ್ರ್ಯ





       ಸ್ವಾತಂತ್ರ್ಯ..

ನೆತ್ತರು ಹರಿಯಿತು, ಮೌನವೂ ಮುರಿಯಿತು
ಅನೀತಿ ಅಳಿಯಿತು,  ಅನ್ಯಾಯವ ಹೊಡೆಯಿತು
ಬರಿ  ಮಣ್ಣಿಗಲ್ಲ , ಹಿಡಿ ಹೊನ್ನಿಗಲ್ಲ
ಗಡಿ ಗಡಿಗೆ ನಡೆಯುವ ಅವಮಾನದ ಕಿಡಿ
ಗುಡು ಗುಡುಗಿ ಗುಡಿಸಿತು ಬಿಡುಗಡೆಯ ಗಾಡಿ.

ದಣಿವ ಯೋಚನೆ ಇಲ್ಲ, ಸಾವಿಗದು ಸಾಯೊಲ್ಲ,
ಸ್ವಾತಂತ್ರ್ಯದ ಕಿಡಿ  ಸಧಬಿಮಾನದ ನುಡಿ
ಕಿಚ್ಚ ಹಚ್ಚಿತು, ಕೊಚ್ಚಿ ಕೊoದಿತು
ಪರಕೀಯರ ಪತನಕೆ ಪಟ್ಟು ಹಿಡಿಯಿತು.

ಕಟ್ಟಿ ಕೊಟ್ಟರು ಸ್ವೇಚ್ಛೆಯ ನೆಲೆ
ಸ್ವಚ್ಛoದದಿ ಹಾರು ಗುರಿ ಕರೆಯುವ ಕಡೆಗೆ
ದೇಶ ನಿನ್ನದು, ಭಾಷೆ ನಿನ್ನದು
ಧೀರರ ಋಣ, ಕರ್ತವ್ಯದ ಪಣ
ಕಡೆವರೆಗೂ ಇರಲಿ, ಕರುನಾಡ ಬೆಳಗಲಿ


ಭರತ ಮಾತೆ ನಿನ್ನ ಪೂಜಿಪೆ,
ನಿನ್ನ ಬಂಧನ ಬಿಡಿಪ ಯೋಧರ ನಿತ್ಯ ಪೂಜಿಪೆ.

-ದಿಲೀಪ್ ಶೆಟ್ಟಿ

ಶುಕ್ರವಾರ, ಆಗಸ್ಟ್ 12, 2011

ನೆನಪಲಿ


         ನೆನಪಲಿ..
ನೆನೆದ ಮನ ನೆನೆಯಿತು
ನಿನ್ನದೆ ನೆನಪಿನಲಿ
ನವಿಲು ಗರಿಬಿಚ್ಚಿ
ನಲಿಯುವ ತೆರದಲಿ.
ಮಧುರ ಮೊಹವೊಂದು 
ನಾಚುತ ಮೊಳಕೆಗೆ ಬಂದು
ಅಪ್ಪುಗೆಯ ಬೇನೆಯಲಿ ಬಳಲುತಿಹುದು.

      -ದಿಲೀಪ್ ಶೆಟ್ಟಿ


ಗುರುವಾರ, ಆಗಸ್ಟ್ 11, 2011

ಗೊತ್ತಿದೆಯಾ??


ಗೊತ್ತಿದೆಯಾ??

ಸೋಮವಾರ ಸಂತೆಯಲಿ
 ಸೊಮಣ್ಣನ ಮಗಳು
ಸೊಂಟ ಮುರಿದುಕೊಂಡಿದ್ದು
ಗೊತ್ತಿದೆಯಾ??

ಮೊನ್ನೆ ಮಂಗಳವಾರ
ಮಲ್ಲಿಗೆ ಹೂವ ಕೊಯ್ಯುತಿದ್ದ
ನಮ್ಮೂರ ಗೌಡತಿಗೆ
ನಾಗರಹಾವು ಕಚ್ಚಿದ್ದು
ಗೊತ್ತಿದೆಯಾ??

ನಿನ್ನೆ ಆಡುತ್ತಿದ್ದ
ನಿಮ್ಮನೆ ಹುಡುಗಂಗೆ
ನಂದೀಶ ಹೊಡೆದದ್ದು
ಗೊತ್ತಿದೆಯಾ??

ಗೊತ್ತಾಗದು ನಮಗೆ ಗುರಿಯಿರದ ಪಯಣದಿ
ಗೊತ್ತಾಗದೇ ನಿಮಗೆ ಗೆದ್ದಲು ಹಿಡಿದೆ ಜೀವನ??

ಹಿಂದೂ ದೇಶದ ಜನರು
ಬಂಧು-ಬಾಂಧವರಂತೆ 
ಬೆಂದು ಹೊಯಿತು ಭಾವೈಕ್ಯತೆ,
ಬರದಿ ಓಡುವ ಜಗಕೆ.
ಬದುಕಬಲ್ಲೆವು ನಾವು ಪರರ ಹಂಗಿಲ್ಲದೆ,
ಬದುಕಬಲ್ಲೆವೇ ನಾವು ಪರರಿಲ್ಲದೆ???

      -ದಿಲೀಪ್ ಶೆಟ್ಟಿ



ಮಂಗಳವಾರ, ಆಗಸ್ಟ್ 2, 2011

ಗೃಹಸ್ತ....


ಗೃಹಸ್ತ....

ದೀವಿಗೆಯ ಹಿಡಿದು 
ಧಾರಿ ಹುಡುಕುತಲಿದ್ದೆ.
ಧಾವಿಸಿ ಬರುವರೇ 
ದೇವ ಕನ್ಯೆಯರು?
ಧಣಿವಾಗಿದೆ, ಹಸಿವಾಗಿದೆ.
ನಿತ್ರಾಣದ ಜೀವ,ಧಗೆ ಬಿಡುತಲಿದೆ.
ಧರೆ ಕಾಯುವ ದೊರೆಯೇ ,
ದಯೆ ತೋರಿಸೋ ಎನಗೆ.
ಒಂಟಿ ಬಾಳಿದು, ಜಂಟಿ ಮಾಡಬಾರದೇ???

ತುಂಟ ಹುಡುಗಿಯೋ, ತೊನ್ಡೆ ತುಟಿಯೋ,
ತೆಳ್ಳಗಿನ ಸೊಂಟ, ಓರೇ ನೋಟ
ಕೋಮಲ ಪಾದ, ನಿರ್ಮಲ ಮನ
ಮಿನುಗುವ ಹಲ್ಲು, ಮಿಡುಕುವ ಗಲ್ಲ
ಇದಾವುದೂ ಇರದಿರೆ ಅಡ್ಡಿಯು  ಇಲ್ಲ.

ಸನ್ನಡತೆ, ಸಂಭಾವಿತೆ
ಸ್ವಲ್ಪ ಮುನಿಸು, ಚೂರು ಜಂಭ
ಇಷ್ಟು ಕೊಟ್ಟುಬಿಡು.
ಕಷ್ಟ ವಾದರೂ ಕಟ್ಟಿ ಕೊಳ್ಳುವೆ.
ಎಷ್ಟು ದಿನ ಈ ಒಂಟಿ ಬಾಳು??
ಗೃಹಸ್ತ ನಾಗಿಸು, ಗ್ರಹಣ ಓಡಿಸು.
ಸರಿ ಧಾರಿ ತೋರಿಸಿ ಸಂಬಾಳಿಸು.

ದಿಲೀಪ್ ಶೆಟ್ಟಿ